ಮಂಗಳೂರು : ಕಳೆದ ಗುರುವಾರ ಮಂಗಳೂರು ನಗರದ ಬಿಜೈ ಕಾಪಿಕಾಡಿನಲ್ಲಿ ನಡೆದ ಹೃದಯವಿದ್ರಾಹಕ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಬೈಕ್ ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮತ್ತು ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ತೀವ್ರ ಗಾಯಗೊಂಡಿರುವ ಚಿತ್ರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಘಟನೆಯ ವಿವರ:
ಮುರಳಿ ಪ್ರಸಾದ್ ಎನ್ನುವವರು ತನ್ನ ಬೈಕ್ ನಲ್ಲಿ ಕೆಲಸದ ನಿಮಿತ್ತ ಹೊರಡುವ ಸಮಯವನ್ನು ಹೊಂಚು ಹಾಕಿ ಕುಳಿತಿದ್ದ ನಿವೃತ ಬಿಎಸ್ಎನ್ಎಲ್ ಉದ್ಯೋಗಿ ಸತೀಶ್ ಕುಮಾರ್ ತನ್ನ ಕಾರಿನಲ್ಲಿ ರಭಸದಿಂದ ಬಂದು ಡಿಕ್ಕಿ ಹೊಡೆದಿದ್ದ. ಹೊಡೆತದ ಪರಿಣಾಮ ಬ್ಯಾಲೆನ್ಸ್ ಕಳೆದುಕೊಂಡ ಮುರಳಿ ಪ್ರಸಾದ್, ಡಿಕ್ಕಿಯ ರಭಸಕ್ಕೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಮಾಯಕ ಮಹಿಳೆಯ ಮೇಲೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಮಹಿಳೆ ರಸ್ತೆ ಪಕ್ಕದ ಕಾಂಪೌಂಡ್ ಮೇಲೆ ಬಿದ್ದು ನೇತಾಡುತಿದ್ದ ಹೃದಯ ವಿದ್ರಾಹಕ ಘಟನೆ ನಡೆದಿತ್ತು.
ಘಟನೆ ನಡೆದ ತಕ್ಷಣ ಅಕ್ಕ ಪಕ್ಕದ ಜನ ಬಂದು ತಲೆಕೆಳಗಾಗಿ ನೇತಾಡಿದ ಮಹಿಳೆಯ ಕಾಲು ಕಾಂಪೌಂಡ್ ರೋಡ್ ಗೆ ಸಿಕ್ಕಿ ಹಾಕಿಕೊಂಡಿದ್ದರ ಪರಿಣಾಮ ತೆಗೆಯಲು ಹರಸಾಹಸ ಪಟ್ಟು ಕೆಳಗೆ ಇಳಿಸಿದರು. ನಂತರ ಗಾಯಗೊಂಡ ಇಬ್ಬರಿಗೂ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಸತೀಶ್ ಕುಮಾರನ್ನು ಪೊಲೀಸ್ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು.
ಗಾಯಗೊಂಡ ಮುರಳಿ ಪ್ರಸಾದ್ ಹೇಳುವ ಪ್ರಕಾರ ಕಳೆದ 6 ವರುಷಗಳ ಹಿಂದೆ ಇದೇ ವ್ಯಕ್ತಿ ವೈಮನಸ್ಸನ್ನು ಕಟ್ಟಿಕೊಂಡಿದ್ದು, 2023 ರಲ್ಲಿ ನನ್ನ ತಂದೆಗೆ ಆಕ್ಸಿಡೆಂಟ್ ಮಾಡಿದ್ದ ಎಂದು ತಿಳಿಸಿದ್ದಾರೆ. ಆ ಸಮಯದಲ್ಲೂ ಪೊಲೀಸ್ ಕಂಪ್ಲೇಂಟ್ ಮಾಡಲಾಗಿದ್ದು, ಆರೋಪಿ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲವಂತೆ. ಆರೋಪಿ ಕಳೆದ 60 ವರ್ಷದಿಂದ ಆ ಪ್ರದೇಶದಲ್ಲಿ ವಾಸಿಸುತ್ತಿದ್ದು, ಹಿಂದೊಮ್ಮೆ ಹತ್ತಿರದ ಬೇರೊಂದು ಮನೆಯವರಿಗೂ ಉಪಟಳ ಕೊಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅಪರಾಧಿಯ ಎಡೆಬಿಡದ ವೈಮನಸ್ಸು :
ಆರೋಪಿ ನನ್ನ ಅಕ್ಕಂದಿರು ಮನೆಗೆ ಬಂದಾಗಲೂ ಅವರಿಗೆ ಬಯ್ಯೋದು, ಸುಮ್ಮನೆ ಕಾರಣವಿಲ್ಲದೆ ಗಲಾಟೆ ತೆಗೆಯೋದು, ಗಲಾಟೆಗೆ ಪ್ರಚೋದನೆ, ಕೋರ್ಟು ಹೋಗೋದು ಈ ರೀತಿಯ ಉಪಟಳ ವಿನಃ ಯಾವುದೇ ಕಾರಣವಿಲ್ಲದೆ ಮಾಡುತ್ತಿರುವುದು ಮುರಳಿ ಪ್ರಸಾದ್ ಕುಟುಂಬಕ್ಕೆ ಸಮಸ್ಯೆಯಾಗಿ ಕಾಡಿದೆ. 3-4 ವರ್ಷದ ಹಿಂದೆ ಇದೆ ರೀತಿ ಬೈಕುನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಡಿಕ್ಕಿ ಹೊಡೆದು ಕೊಲೆ ಯತ್ನ ಮಾಡಿದ್ದ ಆರೋಪಿ ಈಗ ಮತ್ತೊಮ್ಮೆ ಇದೆ ರೀತಿಯ ಕೆಲಸಕ್ಕೆ ಕೈ ಹಾಕಿರೋದು ಗಾಯಾಳು ಕುಟುಂಬವನ್ನು ಗೊಂದಲಕ್ಕೆ ಈಡುಮಾಡಿದೆ.
ದ್ವೇಷಕ್ಕೆ ಕಾರಣ:
ಆರೋಪಿಯ ಮನೆಯ ಪಕ್ಕದಲ್ಲಿ ಇವರ ಮನೆಯಿದ್ದು, ಆರೋಪಿಗೆ ಕಾಂಪೌಂಡ್ ನಿಂದ ಕಾರು ಹೊರ ತೆಗೆಯಲು ಕಷ್ಟವಾಗುತ್ತಿದ್ದರಿಂದ ಈ ರೀತಿಯ ಕಿರುಟಳ ನೀಡುತ್ತಿದ್ದಾನೆಂದು ತಿಳಿದು ಬಂದಿದೆ. ಕಾರು ಹೊರತೆಗಯಲು ಹೆಚ್ಚಿನ ಸ್ಥಳ ಬೇಕಾಗಿದ್ದು ,ಅದು ಸಿಗದೇ ಇರುವ ಕಾರಣ ದ್ವೇಷ ಕಟ್ಟಿಕೊಂಡಿರಬೇಕು ಆದರೆ ಮುರಳಿ ಪ್ರಸಾದ್ ಮನೆಯವರು ಜಾಗ ಬೇಕಾದರೆ ತೆಗೆದುಕೊಳ್ಳಿ ಎಂದು ತಿಳಿಸಿದ್ದರಂತೆ.
ಸದ್ಯಕ್ಕೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ಮುಂದುವರಿದಿದೆ. ಗಾಯಗೊಂಡ ಮುರಳಿ ಪ್ರಸಾದ್ ಮತ್ತು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.