ಮಂಗಳೂರು: ಧರ್ಮಸ್ಥಳ ಕೇಸ್ ತನಿಖೆ ಚುರುಕುಗೊಂಡಿದೆ. ಬಂಗ್ಲೆಗುಡ್ಡ ರಹಸ್ಯ ಬೇಧಿಸಲು ಎಸ್ಐಟಿ ತಂಡ ನೇತ್ರಾವತಿ ನದಿ ತಟದಲ್ಲಿರುವ ದಟ್ಟ ಕಾಡಿಗೆ ನುಗ್ಗಿದೆ. ಈ ನಡುವೆ ಸೌಜನ್ಯ ಮಾವ ವಿಠಲಗೌಡ ತೋರಿಸಿದ್ದ ಬಂಗ್ಲಗುಡ್ಡ ಜಾಗದಲ್ಲಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.
ಇಂದೂ ಕೂಡ ಮಹಜರು ಕಾರ್ಯ ಮುಂದುವರೆದಿದೆ. ಬಂಗ್ಲಗುಡ್ಡದ ಮರದ ಬಳಿ ನಡೆದ ಶೋಧಕಾರ್ಯಾಚರಣೆ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕ ಬುರುಡೆ, ಅಸ್ಥಿಪಂಜರದ ಬಳಿ ಐಡಿ ಕಾರ್ಡ್ ಪತ್ತೆಯಾಗಿದ್ದು, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ ಎನ್ನುವರು 2017ರಲ್ಲಿ ಕಾಣೆಯಾಗಿದ್ದರು. ಇದೀಗ ಅವರ ಐಡಿ ಕಾರ್ಡ್ ಬಂಗ್ಲೆಗುಡ್ಡದಲ್ಲಿ ಸಿಕ್ಕಿದೆ.
7 ವರ್ಷಗಳ ಹಿಂದೆ ವೃದ್ಧ ಯು.ಬಿ ಅಯ್ಯಪ್ಪ ನಾಪತ್ತೆಯಾಗಿದ್ದರು. ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾಗ ಅಯ್ಯಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕುಟ್ಟ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಯು.ಬಿ.ಅಯ್ಯಪ್ಪ ಅವರಿಗಾಗಿ ಕುಟುಂಬ ಸಾಕಷ್ಟು ಹುಡುಕಾಟ ನಡೆಸಿತ್ತು. ಆದಾಗ್ಯೂ ಅವರ ಸುಳಿವು ಇರಲಿಲ್ಲ, ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕಾರ್ಯಾಚರಣೆ ನಡೆಸಿದ ವೇಳೆ ಅಸ್ಥಿಪಂಜರವೊಂದರ ಬಳಿ ಯು.ಬಿ.ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ