ಧರ್ಮಸ್ಥಳ : ಸಾಮಾಜಿಕ ಜಾಣತಾಲಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಆಗುತ್ತಿರುವುದನ್ನು ಖಂಡಿಸಿ, ಧರ್ಮಸ್ಥಳ ಗ್ರಾಮ ಹಿತ ರಕ್ಷಣಾ ವೇದಿಕೆ ಮಾರ್ಚ್ 27ರ ಗುರುವಾರದಂದು ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ.
ಸೌಜನ್ಯ ಕೊಲೆ ಪ್ರಕರಣಕ್ಕೂ, ಧರ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ, ಆದರೂ ವಿನಃ ಕಾರಣ ಧರ್ಮಸ್ಥಳದ ಹೆಸರನ್ನು ಕೆಲ ಹಿತಾಶಕ್ತಿಗಳು ಸಾಮಾಜಿಕ ತಾಣ ಮತ್ತು ಇನ್ನಿತರ ವೇದಿಕೆಗಳಲ್ಲಿ ತೀರಾ ಅವಹೇಳನಕಾರಿ ಮತ್ತು ಆಧಾರರಹಿತ ಮಾಹಿತಿಗಳನ್ನು ಹರಡಿಸುವುದರಿಂದ, ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ಖಂಡಿಸಿ ಧರ್ಮಸ್ಥಳ ಗ್ರಾಮ ಹಿತ ರಕ್ಷಣಾ ವೇದಿಕೆ ಈ ಪ್ರತಿಭಟನಾ ಸಭೆಯನ್ನು ಕರೆದಿದೆ.
ಮಾರ್ಚ್ 27ನೇ ಗುರುವಾರ ಬೆಳಗ್ಗೆ 10 ಗಂಟೆಯಿಂದ ನೇತ್ರಾವತಿ ನದಿ ಕಿನಾರೆಯಲ್ಲಿರುವ ಪ್ರಕೃತಿ ಚಿಕಿತ್ಸಾಲಯದ ಪಕ್ಕದ ಮೈದಾನದಲ್ಲಿ ಧರ್ಮಸ್ಥಳ ಗ್ರಾಮದ ನಾಗರಿಕರು ಒಟ್ಟು ಸೇರಿ ಪ್ರತಿಭಟನಾ ಕಾರ್ಯಕ್ರಮ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅಪಪ್ರಚಾರ ಮತ್ತು ತೇಜೋವಧೆ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆಯನ್ನು ಇಡಲಿದ್ದಾರೆ.
ಧರ್ಮಸ್ಥಳ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಗೌಡ ಮತ್ತು ತಂಡ ಮಂಗಳವಾರ (25) ರಂದು ಸುದ್ದಿಗೋಷ್ಠಿ ನಡೆಸಿ, ಮಧ್ಯಾಹ್ನ ಸುಮಾರು 12:30 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಧರ್ಮಸ್ಥಳ ಗ್ರಾಮಸ್ಥರ ಹೊರತು, ಹೊರಗಡೆಯವರು ಕೂಡಾ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. ವಿಶೇಷವೆಂದರೆ, ಸಮಾವೇಶದಂದು ಸ್ಪೋಟಕ ಮಾಹಿತಿಯನ್ನು ಕೊಡಲಿದ್ದೇವೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲಾ, ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸಿ.ಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್, ಉಪಾಧ್ಯಕ್ಷ ಅಜಿತ್ ಜೈನ್, ವಾಹನ ಚಾಲಕ ಮಾಲಕರ ಸಂಘದ ಪ್ರತಿನಿಧಿ ನೀಲಕಂಠ ಶೆಟ್ಟಿ, ವರ್ತಕರ ಸಂಘದ ಪ್ರತಿನಿಧಿ ಭವಾನಿ ಶಂಕರ್, ಅಖಿಲೇಶ್, ಶೃತಾಂಜನ್ ಜೈನ್, ಧನಕೀರ್ತಿ ಅರಿಗಾ, ಶ್ರೀನಿವಾಸ ರಾವ್ ಧರ್ಮಸ್ಥಳ ಮೊದಲಾದವರು ಭಾಗವಹಿಸಿದರು.