ಸಾರ್ವಜನಿಕರಿಗೆ ರಕ್ಷಣೆ ಕೊಡುವ ಪೊಲೀಸ್ ಅಧಿಕಾರಿಯೇ ತನ್ನ ಹೆಂಡತಿಗೆ ಹಣಕ್ಕಾಗಿ ಮತ್ತು ಇನ್ನಿತರ ಬೇಡಿಕೆಗಳಿಗೆ ಕಿರುಕುಳ ಕೊಡುತ್ತಿದ್ದ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಯಾಗಿದ್ದ ಪಿ. ಕಿಶೋರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ತಂದೆ ಪುಟ್ಟಚೆನ್ನಪ್ಪ, ತಾಯಿ ಸರಸ್ವತಮ್ಮ ಮತ್ತು ಸಹೋದರ ಪಿ. ಚಂದನ್ ಹೆಸರು ಕೂಡ ಇದೆ. ಇವರೆಲ್ಲರೂ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳು.
ಪ್ರಸ್ತುತ ನಗರಭಾವಿಯ ಟೀಚರ್ಸ್ ಕಾಲೋನಿಯ ಮಾನಸ ನಗರದ ನಿವಾಸಿ ಕಿಶೋರ್ ಪತ್ನಿ ಆರ್. ವರ್ಷಾ ದೂರು ದಾಖಲಿಸಿದ ಮಹಿಳೆ.
ಪ್ರಕರಣದ ವಿವರಗಳು
ಬೇಡಿಕೆ 1
ಕಿಶೋರ್ ಮತ್ತು ವರ್ಷಾ ಕುಟುಂಬಗಳ ಒಪ್ಪಂದದ ಮೇರೆಗೆ ಇವರ ಮದುವೆ ಫೆಬ್ರವರಿ 21,2024 ರಂದು ನಡೆದಿತ್ತು. ಮದುವೆ ನಿಶ್ಚಿತಾರ್ಥ ಮುಂಚೆ, ಮದುವೆ ವಿಚಾರದ ಬಗ್ಗೆ ಚರ್ಚೆ ಸಂದರ್ಭದಲ್ಲಿ ಕಿಶೋರ್ ಅವರ ತಾಯಿ ಪುಟ್ಟಚೆನ್ನಮ್ಮ ಮತ್ತು ಇತರ ಕುಟುಂಬ ಸದಸ್ಯರು ಮದುವೆ ವೆಚ್ಚಕ್ಕಾಗಿ 25 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ, ಆದರೆ ವರ್ಷಾ ಪೋಷಕರು ತಮಗೆ ಅಷ್ಟು ದೊಡ್ಡ ಮೊತ್ತ ಭರಿಸಲು ಸಾಧ್ಯವಾಗದೆ ಇರುವ ಕಾರಣ 10 ಲಕ್ಷ ರೂಪಾಯಿ ನೀಡಲು ಬೇಡಿಕೊಂಡಿದ್ದು, ಕೊನೆಗೆ ಕಿಶೋರ್ ಕುಟುಂಬ ಒಪ್ಪಿಕೊಂಡಿತ್ತಂತೆ.
ಬೇಡಿಕೆ 2
ನಂತರದ ದಿನಗಳಲ್ಲಿ, ನವೆಂಬರ್ 24, 2023 ರಂದು ನಿಶ್ಚಿತಾರ್ಥ ನಡೆದಿದ್ದು, ಆ ಸಂದರ್ಭದಲ್ಲಿ 18 ಗ್ರಾಂ ಚಿನ್ನದ ಉಂಗುರವನ್ನು ಕಿಶೋರ್ ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು ಎಂದು ಕೇಸಿನಲ್ಲಿ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಬೇಡಿಕೆ 3
ನಿಶ್ಚಿತಾರ್ಥದ ಕೆಲವೇ ದಿನಗಳ ನಂತರ ಕಿಶೋರ್ ಕಾರು ಬೇಕೆಂದು ಡಿಮ್ಯಾಂಡ್ ಮಾಡಿದ್ದಾನಂತೆ. ಮೊದಲಿಗೆ ನಿರಾಕರಿಸಿದರು, ಕೊನೆಗೆ ವರ್ಷಾ ಅವರ ತಂದೆ ಮಗಳ ಕಷ್ಟವನ್ನು ಅರಿತು, ಅಂತಿಮವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ಹುಂಡೈ ಶೋರೂಮ್ ನಿಂದ 23 ಲಕ್ಷ ಬೆಲೆ ಬಾಳುವ ಕಾರನ್ನು ಖರೀದಿ ಮಾಡಿ ಕೊಟ್ಟರಂತೆ.
ಮದುವೆ ಸಮಾರಂಭಕ್ಕೆ ಮಾಡಿದ ಖರ್ಚು
ದೂರಿನ ಪ್ರಕಾರ, ವರ್ಷಾ ಅವರ ಕುಟುಂಬ ಮದುವೆ ಸಮಾರಂಭಕ್ಕಾಗಿ 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿತ್ತು. ಮದುವೆ ಭಾಗವಾಗಿ 10 ಲಕ್ಷ ರೂಪಾಯಿ ನಗದು, ಕಿಶೋರ್ ಗೆ 135 ಗ್ರಾಂ ಚಿನ್ನಾಭರಣ, 850 ಗ್ರಾಂ ಚಿನ್ನಾಭರಣ ವರ್ಷಾಗೆ ಮತ್ತು 3 ಕೆಜಿ ಬೆಳ್ಳಿ ಆಭರಣಗಳನ್ನು ನೀಡಲಾಗಿತ್ತು ಎಂದು ಕೇಸಿನಲ್ಲಿ ದಾಖಲಿಸಿದ್ದರಂತೆ.
ಬಂದೂಕುವಿಂದ ಗುಂಡು ಹಾರಿಸುವ ಬೆದರಿಕೆ
ಮದುವೆ ಸಮಯದಲ್ಲಿ, ಕಿಶೋರ್ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದು, ಅಲ್ಲಿ ಯಾವುದೇ ರೀತಿಯ ಆದಾಯವಿಲ್ಲದ ಕಾರಣ, ವರ್ಗಾವಣೆಯನ್ನು ಕೋರಿದ್ದರು. ತನ್ನ ವರ್ಗಾವಣೆಯ ಹಾದಿ ಸುಗಮವಾಗಿಸಲು ವರ್ಷಾ ತಂದೆಯಿಂದ 10 ಲಕ್ಷ ರೂಪಾಯಿ ಕೇಳಿದ್ದ ಎಂದು ಕೇಸಿನಲ್ಲಿ ವರ್ಷಾ ಉಲ್ಲೇಖಿಸಿದ್ದಾರೆ. ಆದರೆ ಮದುವೆಗೆ ಒಂದು ಕೋಟಿ ಖರ್ಚಾಗಿದ್ದು ಹೆಚ್ಚುವರಿ ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದ್ದಕ್ಕೆ, ಕಿಶೋರ್ ಬಂದೂಕಿನಿಂದ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ವರ್ಗಾವಣೆಯಾದ ನಂತರ ಮತ್ತಷ್ಟು ಬೇಡಿಕೆ ಮತ್ತು ಕಿರುಕುಳ
ಧರ್ಮಸ್ಥಳಕ್ಕೆ ವರ್ಗಾವಣೆಯಾದ ಕಿಶೋರ್ ಪೀಠೋಪಕರಣ ಖರೀದಿ ಮಾಡಲು 2 ಲಕ್ಷ ರೂಪಾಯಿ ಸೇರಿದಂತೆ ಹಣಕಾಸಿನ ಬೇಡಿಕೆ ಮುಂದಿಟ್ಟಾಗ, ವರ್ಷ ನಿರಾಕರಿಸಿದ್ದು, ಕಿಶೋರ್ ಕಿರುಕುಳ ಹೆಚ್ಚಾಯಿತು ಮತ್ತು ಆತ ರೋಲಿಂಗ್ ಪಿನ್ ನಿಂದ ಅವಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಎಂದು ವರದಿಸಲಾಗಿದೆ.
ಸದ್ಯದ ಕಿರುಕಳ
ಮಾರ್ಚ್ 21, 2025 ರ ರಾತ್ರಿ, ಕಿಶೋರ್ ತನ್ನನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿ, ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 1 ಗಂಟೆಯವರೆಗೆ ಪೊಲೀಸ್ ಬೆಲ್ಟಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ವರ್ಷಾ ರವರಿಗೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ನೀಡಲಾಗಿತ್ತು.
ತನಿಖೆ ನಡೆಯುತ್ತಿದೆ
ಕಿಶೋರ್ ಜೊತೆಗೆ ತಂದೆ ಪುಟ್ಟಚೆನ್ನಪ್ಪ, ತಾಯಿ ಸರಸ್ವತಮ್ಮ ಮತ್ತು ಸಹೋದರಿ ಪಿ. ಚಂದನ್ ಹೆಸರು ಕೇಸಿನಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.