ಪುತ್ತೂರು : ಮಂಗಳೂರು - ಬೆಂಗಳೂರು ರೈಲಿನಲ್ಲಿ ಸಂಚಾರಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಕೆಳಗಡೆ ಬಿದ್ದು 15 ಗಂಟೆಗಳ ಬಳಿಕ ಪತ್ತೆಯಾದ ಘಟನೆ ಪುತ್ತೂರಿನ ಸವಣೂರಿನಲ್ಲಿ ನಡೆದಿದೆ. ಮಾರ್ಚ್ 25 ರಂದು ಈ ಘಟನೆ ನಡೆದಿದೆ.
ಘಟನೆಯ ವಿವರ
ಕುಮುಟಾದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉದಯ್ ಕುಮಾರ್ ರಾತ್ರಿ 11 ಗಂಟೆಗೆ ಸವಣೂರು ಸಮೀಪದ ಸುಣ್ಣಾಜೆ ಬಳಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ಸ್ಥಳದಿಂದ 25 ಅಡಿಗಳಷ್ಟು ಕೆಳಗೆ ಜಾರಿ ಹೋಗಿದ್ದ ಯುವಕ ಅಲ್ಲಿ ಇದ್ದ ಮೋರಿಯ ಪಕ್ಕ ಮಲಗಿದ ಸ್ಥಿತಿಯಲ್ಲಿ ಬಾಕಿಯಾಗಿದ್ದರು. ತುಸು ನಿರ್ಜನ ಪ್ರದೇಶವಾಗಿದ್ದ ಈ ಸ್ಥಳ, ಇಳಿಜಾರಿನಿಂದ ಕೂಡಿತ್ತು.
ಕೆಳಗಡೆ ಬಿದ್ದ ಯುವಕನನ್ನು ಬೀಳುವ ಸಂದರ್ಭದಲ್ಲಿ ಗಮನಿಸಿದ ಇತರೆ ಪ್ರಯಾಣಿಕರು, ನೆಟ್ಟಣ ಸ್ಟೇಷನ್ ತಲುಪಿದ ಕೂಡಲೇ ಸ್ಟೇಷನ್ ಮಾಸ್ಟರ್ ಗೆ ತಿಳಿಸಿದ್ದರು. ಆದರೆ ಯುವಕ ಬಿದ್ದ ಜಾಗ ಯಾವುದೆಂದು ಯಾರಿಗೂ ಸರಿಯಾಗಿ ತಿಳಿಯದ ಕಾರಣ, ಪತ್ತೆ ಕಾರ್ಯವು ಸಾಧ್ಯವಾಗಿರಲಿಲ್ಲ.
ಬದುಕುಳಿದ ಯುವಕ
ಮಾರ್ಚ್ 26 ರಂದು ಕೊಳವೆಬಾವಿಗೆ ಹಾಕಿದ್ದ ಪಂಪ್ ಎಳೆಯಲು ಹೋಗಿದ್ದ ಜನರು ಮೋರಿ ಪಕ್ಕದಲ್ಲಿ ನರಳುತ್ತಿದ್ದ ಶಬ್ದ ಕೇಳಿ ವಿಚಾರಿಸಿದಾಗ ಘಟನೆಯ ಬಗ್ಗೆ ತಿಳಿದುಬಂದಿದೆ. ನಂತರ ಪೊಲೀಸ್ ಸೂಚನೆ ಮೂಲಕ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮುಖ ಮತ್ತು ದೇಹಕ್ಕೆ ತುಂಬಾ ಗಾಯವಾಗಿದೆ ಎಂದು ವರದಿಯಾಗಿದೆ