19 June 2025 | Join group

ವಿಜಯನಗರ ಕಾಲದ ಪವಿತ್ರ ಶಿವಕ್ಷೇತ್ರ: ಮೊಗರ್ನಾಡು ನಿಟಿಲಾಕ್ಷ ಸದಾಶಿವ ದೇವಸ್ಥಾನದ ಐತಿಹಾಸಿಕ ಹಾಗೂ ದೈವಿಕ ಮಹತ್ವ

  • 05 May 2025 12:04:48 AM

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಗರ್ನಾಡು ಸಾವಿರ ಸೀಮೆಯ ದೇವಸ್ಥಾನ ಅದೇ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ. ಒಟ್ಟು 16 ಗ್ರಾಮಗಳನ್ನು ಒಳಗೊಂಡ ಪ್ರದೇಶವನ್ನು ಮೊಗರ್ನಾಡು ಸೀಮೆ ಎಂದು ಕರೆಯಲ್ಪಡುತ್ತದೆ. ಈ ದೇವಸ್ಥಾನ ವಿಜಯನಗರ ಕಾಲದಿಂದಲೂ ಆರಾಧಿಸಲ್ಪಡುವಂತಹ ಸ್ವಯಂ ಉದ್ಭವ ಲಿಂಗ ಶಿವಾಲಯ ಅದೇ ನಿಟಿಲಾಕ್ಷ ಸದಾಶಿವ ದೇವಸ್ಥಾನ.

 

ನಿಟಿಲಾಕ್ಷ ದೇವಸ್ಥಾನದ ಹಿಂದಿರುವ ಕಥೆ

ಸಾವಿರ ವರುಷಗಳ ಹಿಂದೆ ಭೀಕರ ಜಲ ಪ್ರಳಯ ನಡೆದಿತ್ತಂತೆ. ಭೂ ಮಂಡಲವನ್ನು ಅಲ್ಲೋಲ ಕಲ್ಲೋಲಗೊಳಿಸಿದ ಗಂಗೆಯು ಕೋಪಕ್ಕೆ ಭೂದೇವಿಯೇ ನಲುಗಿದ್ದಳಂತೆ. ಗಂಗೆಯು ಶಾಂತ ರೂಪವನ್ನು ತಾಳಿದ ನಂತರ ಪ್ರವಾಹದ ಭೀಕರತೆಯು ಕಡಿಮೆಯಾಗುತ್ತಾ ಬಂತು.

 

ಈ ಸಂದರ್ಭದಲ್ಲಿ ದೋಣಿಯಲ್ಲಿ ಲೋಕ ಸಂಚಾರ ಮಾಡಿಕೊಂಡು ಬರುತ್ತಿರುವಾಗ ಆಯಾಸಗೊಂಡ ಶಿವ ಪಾರ್ವತಿಯರು ವಿಶ್ರಾಂತಿಗಾಗಿ ಒಂದು ಕಡೆ ಕುಳಿತುಕೊಂಡು ದಣಿವಾರಿಸಿಕೊಂಡರು. ಆ ಸ್ಥಳವನ್ನು ಪಿತ್ತ ಪಾದೆ ಎಂದು ಕರೆಯಲಾಗುತ್ತದೆ . ಈ ಸ್ಥಳವು ಬಂಡೆಗಳಿಂದ ಕೂಡಿದೆ. ಪೂರ್ವ ದಿಕ್ಕಿನ ದೊಡ್ಡ ಬಂಡೆಯಲ್ಲಿ ನಿಂತು, ಕಣ್ಣಾಯಿಸುತ್ತ ತಮ್ಮ ಮುಂದಿನ ದಾರಿಯ ದಿಕ್ಕನ್ನು ಹುಡುಕುವಾಗ ಶಿವ ಪಾರ್ವತಿಯರ ಹೆಜ್ಜೆ ಗುರುತುಗಳು ಬಂಡೆಯಲ್ಲಿ ಮೂಡಿದವು.

ಇಲ್ಲಿ ಓದಿ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕಡೇಶಿವಾಲಯ

ಈ ಹೆಜ್ಜೆ ಗುರುತುಗಳು ಇಂದಿಗೂ ನಮಗೆ ಕಾಣ ಸಿಗುತ್ತದೆ. ಈ ಹೆಜ್ಜೆ ಗುರುತುಗಳಿಗೆ ಇಂದಿಗೂ ದೀಪವನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ನಂತರ ಅಲ್ಲಿಂದ ಶಿವ ಪಾರ್ವತಿಯರು ಮೂಲೆಮಾರು ಎಂಬ ಕೆರೆಯಲ್ಲಿ ಜಲಕಗೈದು ಅಲ್ಲಿಂದ ಮುಂದಕ್ಕೆ ಪ್ರಯಾಣಿಸುತ್ತ ಪುದೆಲ್ಪುನಿ ಎಂಬ ಪ್ರದೇಶವನ್ನು ತಲುಪಿದಾಗ ಹಠತ್ತನೆ ದುಷ್ಟ ಶಕ್ತಿಗಳ ಅಟ್ಟಹಾಸವು ಈ ಪ್ರದೇಶದಲ್ಲಿ ಮಿತಿಮೀರಿರುವುದನ್ನು ಮನಗೊಂಡ ಪಾರ್ವತಿಯು ಶಿವನಲ್ಲಿ ಈ ಪ್ರದೇಶದಲ್ಲಿ ಇರುವಂತಹ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿ ಬರುತ್ತೇನೆಂದು ಕೇಳಿಕೊಂಡು ತಾನು ಕೈಗೊಂಡ ಕಾರ್ಯಗಳನ್ನು ಮಾಡಲು ಮುಂದುವರಿಯುತ್ತಾರೆ.

 

ಶಿವಲಿಂಗ ಉದ್ಭವವಾಗಿರುವ ಪುಣ್ಯ ಕ್ಷೇತ್ರ ನಿಟಿಲಾಪುರ

ಅದೊಂದು ದಿವಸ ಮುಂಜಾನೆಯ ಸಮಯ ರೈತನೋರ್ವ ತನ್ನ ಎತ್ತುಗಳನ್ನು ಕರೆದುಕೊಂಡು ದೇವಮಾರು ಎಂಬ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವಾಗ ನೇಗಿಲು ಗದ್ದೆಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಏನಾಯಿತು ಎಂದು ನೋಡಿದಾಗ ನೇಗಿಲು ಸಿಕ್ಕಿ ಹಾಕಿಕೊಂಡ ಜಾಗ ರಕ್ತಮಯವಾಗಿತ್ತು. ಅದನ್ನು ಕಂಡಂತಹ ರೈತ ಗಾಬರಿಗೊಳಗಾಗುತ್ತಾನೆ. ತಕ್ಷಣವೇ ರೈತ ಹಾಗೂ ಎತ್ತುಗಳು ಮಾಯವಾಗುತ್ತವೆ.

 

ಉಳುಮೆ ಮಾಡುತ್ತಿರುವ ರೈತ ಹಾಗು ಎತ್ತುಗಳು ಕಾಣದಿರುವುದನ್ನು ಕಂಡಂತಹ ಊರಿನ ಜನರೆಲ್ಲರೂ ಗಾಬರಿಗೊಂಡು ಬಂದು ನೋಡಿದಾಗ ಗದ್ದೆಯು ರಕ್ತಮಯವಾಗಿತ್ತು. ರಕ್ತಮಾಯವಾದ ಜಾಗದಲ್ಲಿ ಶಿವನು ಲಿಂಗದ ರೂಪದಲ್ಲಿ ಉದ್ಭವವಾಗಿರುವುದು ಕಂಡುಬರುತ್ತದೆ. ನಂತರ ಈ ವಿಷಯವನ್ನು ಕೊಳಕೀರು ರಾಜ ಮನೆತನದ ಅಕ್ಕ ಮಹಾದೇವಿಗೆ ತಿಳಿಸಿದರು. ಆ ಸಮಯದಲ್ಲಿ ರಾಣಿಯು ತನ್ನ ಸಹ ಪರಿವಾರದೊಂದಿಗೆ ಊರಿನವರು ತಿಳಿಸಿದ ಜಾಗಕ್ಕೆ ಬಂದು ನೋಡಿದಾಗ ಲಿಂಗದಿಂದ ರಕ್ತಸ್ರಾವ ಆಗುವುದನ್ನು ರಾಣಿಯು ಗಮನಿಸುತ್ತಾರೆ. ನಂತರ ರಾಣಿಯು ತಾತ್ಕಾಲಿಕವಾಗಿ ಅಲ್ಲಿ ಮುಳಿಹುಲ್ಲಿನ ದೇವಸ್ಥಾನವನ್ನು ನಿರ್ಮಿಸಿದರು.

 

ನಶಿಸಿ ಹೋದ ದೇವಸ್ಥಾನ ಮರು ನಿರ್ಮಾಣ

ಕಾಲಕ್ರಮೇಣವಾಗಿ ನಶಿಸಿ ಹೋಗಿದ್ದಂತಹ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲಾಯಿತು. ಮುಂದೆ ಈ ದೇವಸ್ಥಾನವು ನಿಟಿಲಾಕ್ಷ ಸದಾಶಿವ ದೇವಸ್ಥಾನ ಎನ್ನುವ ನಾಮಾಂಕಿತದಲ್ಲಿ ಪ್ರಖ್ಯಾತಿಯನ್ನು ಪಡೆಯಿತು. ನೇಗಿಲಿನಿಂದ ಶಿವಲಿಂಗಕ್ಕೆ ಆದ ಗಾಯವು ಈಗಲೂ ನಾವು ಕಾಣಬಹುದು. ಪ್ರತಿ ನಿತ್ಯ ಪೂಜೆಯ ಸಂದರ್ಭದಲ್ಲಿ ಶಿವಲಿಂಗದ ಗಾಯದ ಮೇಲೆ ಗಂಧವನ್ನು ಹಚ್ಚಲಾಗುತ್ತದೆ. ಈ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆಗಳು, ಜಾತ್ರಾ ಸಮಯದಲ್ಲಿ ಉತ್ಸವ ಬಲಿ, ರಥೋತ್ಸವ ನಡೆಯುತ್ತದೆ. ಸಂತಾನ ಪ್ರಾಪ್ತಿಗೋಸ್ಕರ ತೊಟ್ಟಿಲು ಸೇವೆ ಹರಕೆಯು ಇಲ್ಲಿನ ಮಹತ್ವದ ಹರಕೆಯಾಗಿದೆ.

 

ಒಂದೇ ಮರ, ಮೂರೂ ದೇವಸ್ಥಾನಗಳಿಗೆ ಧ್ವಜಸ್ತಂಭ

ಮೊಗರ್ನಾಡು ಸಾವಿರ ಸೀಮೆಯ ಕಾಂಪ್ರಬೈಲು ಉಳ್ಳಾಲ್ತಿ ದೈವದೊಂದಿಗೆ ಇರುವಂತಹ ಅಜ್ವರ ದೈವಗಳು ಸೇರಿಕೊಂಡಿವೆ. ಶ್ರೀ ಸುಬ್ರಮಣ್ಯ ಕ್ಷೇತ್ರದಿಂದ ಒಂದು ಇಡೀ ಮರವನ್ನು ತಂದು, ಇಡೀ ಮರದ ತುದಿ ಭಾಗವನ್ನು ನಿಟಿಲಾಪುರದ ನಿಟಿಲಾಕ್ಷ ದೇವಸ್ಥಾನದಲ್ಲಿ, ಮಧ್ಯ ಭಾಗವನ್ನು ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಮತ್ತು ಕಡೆ ಭಾಗವನ್ನು ಕಡೇಶಿವಾಲಯ ಶ್ರೀ ಲಕ್ಷೀ ನರಸಿಂಹ ದೇವಸ್ಥಾನದಲ್ಲಿ ಧ್ವಜಸ್ತಂಭವಾಗಿ ನೆಟ್ಟು ದೈವ ದೇವರ ಜಾತ್ರೆಯನ್ನು ನಡೆಸಿದರೆಂಬ ಪ್ರತೀತಿ ಇದೆ.

 

ನಿಟಿಲಾಪುರದಲ್ಲಿ ಅತಿಮಹಾರುದ್ರಯಾಗ

ದಕ್ಷಿಣ ಕನ್ನಡದಲ್ಲೇ ಇಂದೆಂದಿಗೂ ನಡೆಯದಂತಹ ಅತಿಮಹಾರುದ್ರಯಾಗ ನಿಟಿಲಾಪುರ ಸದಾಶಿವ ದೇವಸ್ಥಾನದಲ್ಲಿ ನಡೆಯುವುದು ಬಹಳ ವಿಶೇಷವಾಗಿದೆ. ಈ ಮಹಾಯಾಗಕ್ಕೆ ದೇಶದಾದ್ಯಂತ ಹಲವಾರು ಭಕ್ತರು ಮತ್ತು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

 

ನಿಟಿಲಾಪುರ ಸದಾಶಿವ ದೇವಸ್ಥಾನಕ್ಕೆ ತಲುಪುವ ವಿಧಾನ

ಮಂಗಳೂರು ಅಥವಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಜಂಕ್ಷನ್ ತಲುಪಿ ಅಲ್ಲಿಂದ ವಿಟ್ಲ ಮಾರ್ಗವಾಗಿ ಚಲಿಸಿ, ಬೋಳಂತೂರು ಮಾರ್ಗವಾಗಿ ನೆಟ್ಲ ಸದಾಶಿವ ದೇವರ ಸಾನಿಧ್ಯಕ್ಕೆ ತಲುಪಬಹುದು.

ದೇವಸ್ಥಾನಕ್ಕೆ ತಲುಪಲು ಈ ಲಿಂಕ್ ಗೆ ಕ್ಲಿಕ್ಲ್ ಮಾಡಿ  ಗೂಗಲ್ ಮ್ಯಾಪ್