ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಆರಂಭದೊಂದಿಗೆ ವಿವಿಧ ಸಾಂಕ್ರಾಮಿಕ ರೋಗಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದೀಗ ಇಲಿಜ್ವರ (ಲೆಪ್ಟೋಸ್ಪೈರೋಸಿಸ್) ಕೂಡ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ವರ್ಷ ಕಳೆದ ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 53 ಇಲಿಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ ಗಮನಾರ್ಹ ಸಂಖ್ಯೆಯ ಸೋಂಕುಗಳು ಇತ್ತೀಚಿನ ದಿನಗಳಲ್ಲಿ ದಾಖಲಾಗಿರುವುದು ಆರೋಗ್ಯ ಇಲಾಖೆಯ ಕಳವಳಕ್ಕೆ ಕಾರಣವಾಗಿದೆ.
ಜಿಲ್ಲೆಯ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಬೆಳವಣಿಗೆ ಕುರಿತು ಇತ್ತೀಚಿನ ಪ್ರಕೃತಿ ವಿಕೋಪ ಸಂಬಂಧಿತ ಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಆರಂಭಿಕ ಹಂತದಲ್ಲಿ ಇಲಿಜ್ವರ ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣಿಸಿಕೊಳ್ಳುವುದರಿಂದ ಹಲವು ಬಾರಿ ಅದನ್ನು ನಿರ್ಲಕ್ಷಿಸುವ ಸಾಧ್ಯತೆ ಇರುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಮೂತ್ರಪಿಂಡ, ಯಕೃತ್ತು ಹಾಗೂ ಶ್ವಾಸಕೋಶಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿ ಜೀವಕ್ಕೂ ಅಪಾಯ ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸೋಂಕು ಹರಡುವ ವಿಧಾನ
ಇಲಿಗಳು ಸೇರಿದಂತೆ ಕೆಲವು ಪ್ರಾಣಿಗಳ ಮೂತ್ರದಲ್ಲಿ ಕಂಡುಬರುವ ‘ಲೆಪ್ಟೋಸ್ಪೈರಾ’ ಎಂಬ ಬ್ಯಾಕ್ಟೀರಿಯಾ ನೀರು ಹಾಗೂ ಮಣ್ಣಿನ ಮೂಲಕ ಹರಡುತ್ತದೆ. ಮಳೆ ಅಥವಾ ಪ್ರವಾಹದ ನೀರಿನಲ್ಲಿ ಕಾಲಿನಿಂದ ನಡೆದಾಗ, ದೇಹದಲ್ಲಿರುವ ಸಣ್ಣ ಗಾಯಗಳು, ಚರ್ಮದ ಸೀಳುಗಳು ಅಥವಾ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಈ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಬಹುದು.
ಗಮನಿಸಬೇಕಾದ ಲಕ್ಷಣಗಳು
ಇಲಿಜ್ವರ ಬಾಧಿತರಲ್ಲಿ ತೀವ್ರ ಜ್ವರ, ಚಳಿ, ತಲೆನೋವು, ಕಣ್ಣು ಕೆಂಪಾಗುವುದು, ದೇಹ ಹಾಗೂ ಮಾಂಸಖಂಡಗಳ ನೋವು, ಸೆಳೆತ, ಕಾಮಾಲೆ, ಹೊಟ್ಟೆನೋವು, ವಾಂತಿ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಬಹುದು. ಮಳೆಗಾಲದಲ್ಲಿ ಈ ಲಕ್ಷಣಗಳನ್ನು ಡೆಂಗೆ ಅಥವಾ ಸಾಮಾನ್ಯ ವೈರಲ್ ಜ್ವರ ಎಂದು ತಪ್ಪಾಗಿ ಅಂದಾಜಿಸುವ ಸಾಧ್ಯತೆಯೂ ಇದೆ.
ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು
ಪ್ರವಾಹ ಅಥವಾ ನಿಂತ ನೀರಿನಲ್ಲಿ ಬರಿಗಾಲಿನಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು.
ರಬ್ಬರ್ ಬೂಟು ಹಾಗೂ ಕೈಗವಸುಗಳ ಬಳಕೆ ಮಾಡಬೇಕು.
ದೇಹದಲ್ಲಿ ಗಾಯಗಳಿದ್ದರೆ ಕಲುಷಿತ ನೀರಿನ ಸಂಪರ್ಕದಿಂದ ದೂರ ಇರಬೇಕು.
ಕುದಿಸಿ ತಣ್ಣಗಾದ ಶುದ್ಧ ನೀರನ್ನೇ ಕುಡಿಯಬೇಕು.
ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಲಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
ಜ್ವರ ಅಥವಾ ಇತರೆ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧ ಸೇವನೆ ಮಾಡದೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದರ ಮೂಲಕ ಇಲಿಜ್ವರದಂತಹ ಅಪಾಯಕಾರಿ ಸೋಂಕುಗಳಿಂದ ಸುರಕ್ಷಿತವಾಗಿರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.





